== ಸ್ಥಳ == ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಅಳದಂಗಡಿಯಲ್ಲಿ ಪಾಲ್ಗುಣಿ ನದಿತೀರದಲ್ಲಿ ೨೦೦ ಅಡಿ ಎತ್ತರದ ಗುಡ್ಡೆಯ ಮೇಲೆ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಯ ಈ ಜೈನ ತೀರ್ಥ ಕ್ಷೇತ್ರವಿದೆ. == ಇತಿಹಾಸ == ಅಜಿಲ ವಂಶಸ್ಥರಿಂದ ಸುಮಾರು ೭ ಶತಮಾನಗಳಿಂದ ಆರಾಧಿಸಲ್ಪಡುತ್ತಿದ ಬೆಟ್ಟದ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಗೆ ಸುದೀರ್ಘಕಾಲ ಇತಿಹಾಸವೂ ಇದೆ. ಸುತ್ತಲೂ ರಮ್ಯವಾದ ಪರಿಸರವಿದೆ. ಬಸದಿಯ ಮೂಲ ನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿ ಈ ಬಿಂಬವು ಪ್ರಭಾವಲಯವನ್ನು ಒಳಗೊಂಡಿಲ್ಲ. ಬಸದಿಯಲ್ಲಿ ಪ್ರತಿನಿತ್ಯ ಬೆಳಗ್ಗೆ ಪೂಜೆ ನಡೆಯುತ್ತದೆ. ಇತರ ಬಸದಿಗಳಿಗಿಂತ ವಿಭಿನ್ನ ರೀತಿಯಾದ ಆಕರ್ಷಣೆಯವಾದಂತಹ ವಿಷಯವನ್ನು ಇಲ್ಲಿ ಕಾಣಬಹುದಾಗಿದೆ. == ಆಚರಣೆ ದೈವ == ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಪದ್ಮಾವತಿ ದೇವಿ ಮತ್ತು ಬ್ರಹ್ಮದೇವರು ಜೊತೆಯಲ್ಲಿ ಆರಾಧಿಸಲ್ಪಡುತ್ತಿದ್ದಾರೆ.ಈ ಜಿನಾಲಯದಲ್ಲಿರುವ ಶ್ರೀ ಬ್ರಹ್ಮದೇವರ ವಿಗ್ರಹವು ಅತ್ಯಂತ ಆಕರ್ಷಣೀಯವಾಗಿದೆ. ಅದರ ಜೊತೆಗೆ ಅಷ್ಟೇ ಕಾರಣಿಕ ಉಳ್ಳದ್ದೂ ಆಗಿದೆ. ಇಲ್ಲಿ ಕೇವಲ ಜೈನ ಧರ್ಮದವರು ಮಾತ್ರವಲ್ಲದೆ ಜೈನೇತರರು ಕೂಡ ಈ ಬ್ರಹ್ಮ ದೇವರನ್ನು ಪೂಜಿಸುತ್ತಾರೆ. == ಪೂಜಾ ವಿಧಾನ == ಶ್ರೀ ಪಾರ್ಶ್ವನಾಥ ಸ್ವಾಮಿಗೆ ಅಭಿಷೇಕವನ್ನು ಮಾಡುವಾಗ ಜಲ, ಕ್ಷೀರ ಪಂಚಾಮೃತ, ಸೀಯಳ ಮುಂತಾದ ದ್ರವ್ಯಗಳನ್ನು ಬಳಸಲಾಗುತ್ತದೆ. ಬಸದಿಯಲ್ಲಿ ಒಬ್ಬರು ಮಾತ್ರ ಇಂದ್ರರು ಇರುತ್ತಾರೆ. ಇಲ್ಲಿ ದಿನಕ್ಕೆ ಒಂದು ಬಾರಿ ಅಭಿಷೇಕ ನಡೆಯುತ್ತದೆ. ಬಸದಿಯಲ್ಲಿ ಮೂಲ ನಾಯಕನ ಮೂರ್ತಿಗೆ ಬಿಟ್ಟು ೨೪ ತೀರ್ಥಂಕರರ ಸುಂದರವಾದ ಚಿಕ್ಕ ಚಿಕ್ಕ ಮೂರ್ತಿಗಳನ್ನು ಕಾಣಬಹುದು ಇದು ಇಲ್ಲಿಯ ಒಂದು ಆಕರ್ಷಣೆ.ಶ್ರೀ ಪಾಶ್ವನಾಥ ಸ್ವಾಮಿಯ ಮೂರ್ತಿಯ ಬಗ್ಗೆ ಜೊತೆಗೆ ಇಲ್ಲಿರುವ ಇನ್ನೊಂದು ಮೂರ್ತಿಯೆಂದರೆ ಶ್ರೀಮಾತೆ ಪದ್ಮಾವತಿ ಅಮ್ಮನವರದ್ದು. ಇದನ್ನು ಇಲ್ಲಿಯ ದೇವ ಕೋಷ್ಟದಲ್ಲಿ ಇಡಲಾಗಿದೆ. == ಅಲಂಕಾರ == ಪದ್ಮಾವತಿ ಅಮ್ಮನವರಿಗೆ ಸೀರೆ ಉಡಿಸಿ, ಬಳೆ ತೊಡಿಸಿ, ಶೃಂಗಾರ ಮಾಡಿ ಪೂಜೆ ನಡೆಸಲಾಗುತ್ತದೆ. ಅಮ್ಮನವರ ಮೂರ್ತಿಯು ಪೂರ್ವ ದಿಕ್ಕಿಗೆ ಮುಖ ಮಾಡಿದೆ. ಅಮ್ಮನವರ ಎದುರು ಹೂವು ಹಾಕಿ ನೋಡುವ ಕ್ರಮ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ಇದರ ಜೊತೆಯಲ್ಲಿಯೇ ಇರುವ ಬ್ರಹ್ಮ ದೇವರ ಮೂರ್ತಿಯು ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ. ಬ್ರಹ್ಮದೇವರ ಮೂರ್ತಿಯು ಕುದುರೆ ಮೇಲೆ ಕುಳಿತಿರುವ ಭಂಗಿಯಲ್ಲಿದೆ. == ದೇವಾಲಯ ವಿಸ್ತರಣೆ == ಈ ಸುಂದರವಾದ ಬಸದಿಯ ಸುತ್ತಲೂ ಅಂಗಳ ಇದೆ. ಪರಿಸರದಲ್ಲಿಯೇ ಪಾರಿಜಾತ ಗಿಡ ಇದೆ. ಬಸದಿಯಲ್ಲಿ ನಾವು ಮುಖ್ಯವಾಗಿ ಘಂಟಾಮಂಟಪ, ಪ್ರಾರ್ಥನಾ, ಮಂಟಪ ಗರ್ಭಗೃಹ. ತೀರ್ಥಮಂಟಪಗಳನ್ನು ನೋಡಬಹುದು. ಹೊರಗಡೆ ದ್ವಾರಪಾಲಕರ ಪೇಂಟಿಂಗ್ ಗಳನ್ನು ಕಾಣಬಹುದು. ಆದರೆ ಇತರ ಯಾವುದೇ ರೀತಿಯ ಶಿಲಾ ಕೃತಿಗಳು, ಉಬ್ಬುಶಿಲ್ಪಗಳು ಅಥವಾ ಮರದ ಕೆತ್ತನೆಗಳು ಇಲ್ಲಿ ಕಂಡುಬರುವುದಿಲ್ಲ. ಬಸದಿಯ ಆವರಣದಲ್ಲಿ ಕ್ಷೇತ್ರಪಾಲ ಹಾಗೂ ನಾಗನ ಕಲ್ಲುಗಳನ್ನು ಕಾಣಬಹುದಾಗಿದೆ. ಕ್ಷೇತ್ರಪಾಲನ ಸನ್ನಿಧಿಯಲ್ಲಿ ನಾವು ಕೆಲವು ರೀತಿಯ ಪೂಜಾ ವಸ್ತುಗಳನ್ನು ಕಾಣಬಹುದು. ಅವುಗಳಲ್ಲಿ ಮುಖ್ಯವಾಗಿರುವುದು ತ್ರಿಶೂಲ. ಬಸದಿಯಲ್ಲಿ ಬಲಿಕಲ್ಲು ಇವೆ. ಇದರ ಜೊತೆಯಲ್ಲಿಯೇ ಅಷ್ಟದಿಕ್ಪಾಲಕರ ಕಲ್ಲುಗಳು ಕೂಡಾ ಇವೆ. == ಉಲ್ಲೇಖಗಳು ==